ಜಮ್ಮ ಮತ್ತು ಕಾಶ್ಮೀರದಲ್ಲಿನ ಬಂಡಾಯ ― ಇದನ್ನು ಕಾಶ್ಮೀರ ಬಂಡಾಯ ಎಂದು ಕೂಡ ಕರೆಯಲಾಗುತ್ತದೆ. ಇದು 1947 ರಿಂದ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪ್ರಾದೇಶಿಕ ವಿವಾದವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತೀಯ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತ್ಯೇಕತಾವಾದಿ ಉಗ್ರಗಾಮಿ ಬಂಡಾಯವಾಗಿದೆ. ಈ ಬಂಡಾಯವು ಹಲವು ಸ್ವರೂಪಗಳಲ್ಲಿ ಅಸ್ತಿತ್ವದಲ್ಲಿದೆ. ಬಂಡಾಯ ಮತ್ತು ಅದರ ಶಮನಗಳ ಎರಡೂ ರೀತಿಯ ಚಟುವಟಿಕೆಗಳು ದಿನೇ ದಿನೇ ತೀವ್ರಗೊಳ್ಳುತ್ತಿರುವುದರಿಂದ ೧೯೮೯ರಿಂದೀಚೆಗೆ ಸಾವಿರಾರು ಜೀವಗಳು ಬಲಿಯಾಗಿವೆ. ವಿವಾದಿತ ೧೯೮೭ರ ಚುನಾವಣೆಯ ನಂತರ ರಾಜ್ಯದ ಶಾಸನಸಭೆಯ ಕೆಲವು ಶಕ್ತಿಗಳು ಆ ಪ್ರಾಂತ್ಯದಲ್ಲಿನ ಸಶಸ್ತ್ರ ಬಂಡಾಯದ ಆಕಸ್ಮಿಕ ಬೆಳವಣಿಗೆಗೆ ವೇಗವರ್ಧಕವಾಗಿ ಪರಿಣಮಿಸುವಂತೆ ಉಗ್ರಗಾಮಿ ತಂಡಗಳನ್ನು ಕಟ್ಟುವುದನ್ನು ಆರಂಭಿಸಿದಾಗ ಕಾಶ್ಮೀರದಲ್ಲಿ ವ್ಯಾಪಕ ಸಶಸ್ತ್ರ ಬಂಡಾಯವು ಆರಂಭವಾಯಿತು. ಮುಜಾಹಿದೀನ್‌ಗಳನ್ನು ಬೆಂಬಲಿಸುವ ಹಾಗೂ ಅವರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೋರಾಡಲು ತರಬೇತಿ ನೀಡುತ್ತಿರುವ ಆರೋಪವನ್ನು ಭಾರತವು ಪಾಕಿಸ್ತಾನದ ಗೂಢಚರ ಸಂಸ್ಥೆ ಇಂಟರ್‌-ಸರ್ವೀಸಸ್‌ ಇಂಟೆಲಿಜೆನ್ಸ್‌ ಮೇಲೆ ಮಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರ ಶಾಸನಸಭೆಯಲ್ಲಿ (ಭಾರತದ ನಿಯಂತ್ರಣದಲ್ಲಿರುವ) ಬಿಡುಗಡೆ ಮಾಡಲಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಒಟ್ಟಾರೆ ೩,೪೦೦ ನಾಪತ್ತೆ ಪ್ರಕರಣಗಳು ಕಂಡುಬಂದಿವೆ ಹಾಗೂ ಈ ಹೋರಾಟವು ಜುಲೈ ೨೦೦೯ರ ವೇಳೆಗೆ ಸುಮಾರು ೪೭,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಜನರನ್ನು ಸಾವಿಗೆ ದೂಡಿದೆ. ಆದಾಗ್ಯೂ ರಾಜ್ಯದಲ್ಲಿನ ಬಂಡಾಯ-ಸಂಬಂಧಿತ ಸಾವುಗಳ ಸಂಖ್ಯೆಯು ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಿಧಾನವಾಗಿ ಮುಂದುವರೆಯುತ್ತಿರುವ ಶಾಂತಿ ಪ್ರಕ್ರಿಯೆಗಳು ಆರಂಭವಾದಾಗಿನಿಂದ ದಿಢೀರ್‌ ಇಳಿಕೆ ಕಂಡಿದೆ. == ಬಂಡಾಯದ ಇತಿಹಾಸ == === ೧೯೪೭-೧೯೮೭ === ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ ಭಾರತ ಮತ್ತು ಪಾಕಿಸ್ತಾನಗಳು ರಾಜಾಡಳಿತದಲ್ಲಿದ್ದ ಕಾಶ್ಮೀರ ರಾಜ್ಯದ ವಿಚಾರವಾಗಿ ಯುದ್ಧವನ್ನು ಮಾಡಿವೆ. ಯುದ್ಧವು ಅಂತ್ಯವಾದ ನಂತರ ಭಾರತ ಕಾಶ್ಮೀರದ ಮೌಲ್ಯಭರಿತ ಭಾಗಗಳ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಿಕೊಂಡಿತು. ಆ ಸಮಯದಲ್ಲಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಹಿಂಸಾಚಾರಗಳು ನಡೆಯುತ್ತಿದ್ದರೂ ಯಾವುದೇ ರೀತಿಯ ಸಂಘಟಿತ ಬಂಡಾಯ ಚಟುವಟಿಕೆಗಳಿರಲಿಲ್ಲ. ಈ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಸನಬದ್ಧವಾದ ಚುನಾವಣೆಗಳು ಮೊತ್ತಮೊದಲಿಗೆ ೧೯೫೧ರಲ್ಲಿ ನಡೆದವು, ಆಗ ಷೇಕ್‌ ಅಬ್ದುಲ್ಲಾರ ಪಕ್ಷವು ಅವಿರೋಧ ಆಯ್ಕೆ ಕಂಡಿತು. ಆದಾಗ್ಯೂ ಷೇಕ್‌ ಅಬ್ದುಲ್ಲಾರು ಕೇಂದ್ರ ಸರ್ಕಾರದ ಕೃಪಾಕಟಾಕ್ಷದಿಂದ ಆಗೊಮ್ಮೆ ಈಗೊಮ್ಮೆ ಹೊರತಾಗಿ ಅಧಿಕಾರ ಕಳೆದುಕೊಳ್ಳುವುದು ಹಾಗೂ ಕೆಲಕಾಲದಲ್ಲಿಯೇ ಮತ್ತೆ ನೇಮಕಗೊಳ್ಳುವುದು ನಡೆಯುತ್ತಲೇ ಇತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಸಮಯವು ರಾಜಕೀಯ ಅಸ್ಥಿರತೆಯಿಂದ ಕೂಡಿದ ಅವಧಿಯಾಗಿತ್ತು ಹಾಗೂ ಒಕ್ಕೂಟ ಸರ್ಕಾರದಿಂದ ಹಲವು ಬಾರಿ ರಾಷ್ಟ್ರಪತಿಗಳ ಆಡಳಿತಕ್ಕೆಒಳಪಡುವುದು ನಡೆಯುತ್ತಲೇ ಇತ್ತು. === ೧೯೮೭-೨೦೦೪ === ಷೇಕ್‌ ಅಬ್ದುಲ್ಲಾರ ಸಾವಿನ ನಂತರ, ಅವರ ಪುತ್ರ ಫಾರೂಕ್‌ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅಂತಿಮವಾಗಿ ಫಾರೂಕ್‌ ಅಬ್ದುಲ್ಲಾ ಕೂಡಾ ಕೇಂದ್ರ ಸರ್ಕಾರದ ಕೃಪಾಕಟಾಕ್ಷದಿಂದ ಹೊರತಾಗಬೇಕಾಯಿತು ಹಾಗೂ ಅದರ ಫಲವಾಗಿ ಭಾರತದ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ಅವರನ್ನು ವಜಾಗೊಳಿಸಿದರು. ಒಂದು ವರ್ಷದ ನಂತರ ಫಾರೂಕ್‌ ಅಬ್ದುಲ್ಲಾ ೧೯೮೭ರ ಚುನಾವಣೆಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿಯನ್ನು ಘೋಷಿಸಿದರು. ಆಪಾದಿಸಲಾದಂತೆ ಆಗಿನ ಚುನಾವಣೆಗಳನ್ನು ಫಾರೂಕ್‌ ಅಬ್ದುಲ್ಲಾರ ಪರವಾಗಿರುವಂತೆ ವಂಚನಾಪೂರ್ವಕವಾಗಿ ನಡೆಸಲಾಗಿತ್ತು. ಇದರ ಪರಿಣಾಮವಾಗಿ ಅನ್ಯಾಯವಾಗಿ ಚುನಾವಣೆಗಳಲ್ಲಿ ಸೋಲು ಕಂಡವರು ಕೊಂಚ ಮಟ್ಟಿಗೆ ಪಾಲ್ಗೊಂಡಿರಬಹುದಾದ ಸಶಸ್ತ್ರ ಬಂಡಾಯ ಚಟುವಟಿಕೆಗಳು ಉಗಮವಾದವು. ಪಾಕಿಸ್ತಾನವು ಇಂತಹಾ ಬಂಡಾಯದ ತಂಡಗಳಿಗೆ ಸೈನ್ಯ ವ್ಯವಸ್ಥಾಪನಾ ಬೆಂಬಲ, ಶಸ್ತ್ರಾಸ್ತ್ರಗಳು, ಜನರು ಹಾಗೂ ತರಬೇತಿಗಳ ವ್ಯವಸ್ಥೆಯನ್ನು ಕೊಡಮಾಡಿತು. === ೨೦೦೪–ಇದುವರೆಗೆ === ೨೦೦೪ರಿಂದ ಕಾಶ್ಮೀರದಲ್ಲಿನ ಬಂಡಾಯಗಾರರಿಗೆ ತಾನು ನೀಡುತ್ತಲಿದ್ದ ಬೆಂಬಲವನ್ನು ಪಾಕಿಸ್ತಾನವು ಹಂತ ಹಂತವಾಗಿ ಹಿಂತೆಗೆದುಕೊಳ್ಳಲಾರಂಭಿಸಿತು. ಹೀಗೇಕಾಯಿತೆಂದರೆ ಕಾಶ್ಮೀರಕ್ಕೆ ಸಂಬಂಧಪಟ್ಟ ಭಯೋತ್ಪಾದಕ ತಂಡಗಳು ಎರಡು ಬಾರಿ ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌‌ರನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದರು. ಅವರ ಉತ್ತರಾಧಿಕಾರಿಯಾದ ಅಸಿಫ್‌ ಅಲಿ ಜರ್ದಾರಿ ಕಾಶ್ಮೀರದಲ್ಲಿನ ಬಂಡಾಯಗಾರರನ್ನು “ಭಯೋತ್ಪಾದಕರು” ಎಂದು ಹೆಸರಿಸುತ್ತಾ ಅದೇ ಕಾರ್ಯನೀತಿಯನ್ನು ಮುಂದುವರೆಸಿಕೊಂಡು ಹೋದರು. ಬಂಡಾಯಕ್ಕೆ ಸಹಾಯ ಹಸ್ತ ನೀಡುತ್ತಿರುವ ಹಾಗೂ ನಿಯಂತ್ರಿಸುತ್ತಿರುವ ಸಂಸ್ಥೆ ಎಂದು ಭಾವಿಸಲಾಗುತ್ತಿರುವ ಪಾಕಿಸ್ತಾನದ ಗೂಢಚರ ಸಂಸ್ಥೆ ಇಂಟರ್‌-ಸರ್ವೀಸಸ್‌ ಇಂಟೆಲಿಜೆನ್ಸ್‌ ಕಾಶ್ಮೀರದಲ್ಲಿನ ಬಂಡಾಯಗಳಿಗೆ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುವ ಪಾಕಿಸ್ತಾನದ ಬದ್ಧತೆಯನ್ನು ಅನುಸರಿಸುತ್ತಿದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಾಹ್ಯ ಶಕ್ತಿಗಳಿಂದ ಪ್ರೇರಿತವಾದ ವಿದ್ಯಮಾನವಾಗಿದ್ದ ಬಂಡಾಯದ ಪ್ರವೃತ್ತಿಯು ಪ್ರಮುಖವಾಗಿ ಸ್ಥಳೀಯ ಅವ್ಯವಸ್ಥೆಯಿಂದ ಪ್ರೇರಿತ ಹೋರಾಟ ಚಟುವಟಿಕೆಗಳಾಗಿ ರೂಪಾಂತರಗೊಂಡರೂ ಭಾರತ ಸರ್ಕಾರವು ಭಾರತದ ಗಡಿಪ್ರದೇಶಗಳಿಗೆ ಸೇನಾ ತುಕಡಿಗಳನ್ನು ಕಳಿಸುವ ಹಾಗೂ ಆ ಮೂಲಕ ಪೌರಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಭಾರತದ ಆಳ್ವಿಕೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಲಿವೆ. == ಬಂಡಾಯಕ್ಕೆ ಕಾರಣಗಳು == === ಪ್ರಜೆಗಳ ಮೇಲೆ ನಡೆಸುತ್ತಿರುವ ದುರಾಚಾರಗಳು === ಕೆಲವು ವಿಶ್ಲೇಷಣಕಾರರು ಜಮ್ಮು ಮತ್ತು ಕಾಶ್ಮೀರಗಳಲ್ಲಿರುವ ಭಾರತೀಯ ತುಕಡಿಗಳ ಸಂಖ್ಯೆಯು ೬೦೦,೦೦೦ರ ಸಮೀಪವಿದೆ ಎಂದು ಆರೋಪಿಸಿದ್ದರೂ ಅಂದಾಜುಗಳ ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದು ಭಾರತ ಸರ್ಕಾರವು ಈ ಬಗ್ಗೆ ಅಧಿಕೃತ ಅಂಕಿಅಂಶಗಳನ್ನು ಬಹಿರಂಗ ಪಡಿಸಲು ನಿರಾಕರಿಸುತ್ತಿದೆ. ಈ ತರಹದ ಸೇನಾ ತುಕಡಿಗಳು ವ್ಯಾಪಕ ಮಾನವಪೀಡಕ ದುರಾಚಾರಗಳಲ್ಲಿ ತೊಡಗಿದ್ದು ನ್ಯಾಯಬಾಹಿರ ಹತ್ಯೆಗಳನ್ನು ಕೈಗೊಳ್ಳುವುದರಲ್ಲಿ ನಿರತವಾಗಿದ್ದು, ಇವೆಲ್ಲವೂ ಅನೇಕ ವೇಳೆ ಕೇವಲ ಮನರಂಜನೆಗಾಗಿರುತ್ತದೆ. ಈ ಪರಿಸ್ಥಿತಿಯು ಬಂಡಾಯಕ್ಕೆ ಬೆಂಬಲಗಳು ರೂಪುಗೊಳ್ಳಲು ಕಾರಣವಾಗಿದೆ. ಆದಾಗ್ಯೂ ಅಕ್ಟೋಬರ್‌‌ ೨೦೧೦ರಲ್ಲಿ, ಸೇನಾ ಮುಖ್ಯಸ್ಥ ಸಿಂಗ್‌ರವರು ಸಂದರ್ಶನವೊಂದರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ೯೫%ಕ್ಕೂ ಹೆಚ್ಚಿನ ಆಪಾದನೆಗಳು ಸುಳ್ಳು ಆರೋಪಗಳೆಂದು ಸಾಬೀತಾಗಿದ್ದು ಅವುಗಳನ್ನು ಸುವ್ಯಕ್ತವಾಗಿ "ಸಶಸ್ತ್ರ ಪಡೆಗಳ ಮೇಲೆ ಅಪಪ್ರಚಾರ ಮಾಡುವ ದುರುದ್ದೇಶದ ಅಗೋಚರ ಹಿತಾಸಕ್ತಿಗಳಿಂದ" ಹೊರಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರಗಳಲ್ಲಿ ೧೯೯೪ರಿಂದ ಇದುವರೆಗೆ ಸೇನಾ ಸಿಬ್ಬಂದಿಗಳ ವಿರುದ್ಧ ೯೮೮ ಆರೋಪಗಳು ದಾಖಲಾಗಿವೆ ಎಂದು ವಿವರಗಳನ್ನು ನೀಡುತ್ತಾ ಹೇಳಿದ್ದರು. ಇವುಗಳಲ್ಲಿ ೯೬೫ ಪ್ರಕರಣಗಳ ತನಿಖೆ ನಡೆಸಲಾಗಿದ್ದು ಅವುಗಳಲ್ಲಿ ೯೪೦ ಪ್ರಕರಣಗಳು ಸುಳ್ಳು ಪ್ರಕರಣಗಳೆಂದು ಪತ್ತೆಯಾಗಿದ್ದು ಇದರ ಪ್ರಮಾಣ ಪ್ರತಿಶತ ೯೫.೨ರಷ್ಟಿದೆ. ಜಮ್ಮು ಮತ್ತು ಕಾಶ್ಮೀರಗಳಲ್ಲಿರುವ ಸೇನಾ ಪಡೆಗಳು ಕೇಂದ್ರ ಸರ್ಕಾರದಿಂದ ತಮಗೆ ನೀಡಲ್ಪಟ್ಟ ತುರ್ತು ಪರಿಸ್ಥಿತಿಯ ಅಧಿಕಾರಗಳಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ರೀತಿಯ ಅಧಿಕಾರಗಳು ಸೇನಾಪಡೆಗಳಿಗೆ ನಾಗರಿಕ ಸ್ವಾತಂತ್ರ್ಯಗಳನ್ನು ಮೊಟಕು ಮಾಡುವ ಅವಕಾಶವನ್ನು ನೀಡುತ್ತದೆ ಹಾಗೂ ಬಂಡಾಯಕ್ಕೆ ಮತ್ತಷ್ಟು ಬೆಂಬಲವನ್ನು ನೀಡಲು ಕಾರಣವಾಗುತ್ತದೆ. ಬಂಡಾಯಗಾರರು ಕೂಡಾ ಕೆಲವರು ಜನಾಂಗೀಯ ಶುದ್ಧೀಕರಣ ಎಂದು ಕರೆಯುವ ಚಟುವಟಿಕೆಯಲ್ಲಿ ತೊಡಗಿ ಸಾಕಷ್ಟು ಮಟ್ಟಿಗೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಜನರನ್ನು ತನ್ನದೇ ಸೇನಾಪಡೆಗಳಿಂದ ಹಾಗೂ ಬಂಡಾಯಗಳಿಂದ ಎರಡರಿಂದಲೂ ರಕ್ಷಿಸಲಾರದ ಸರ್ಕಾರದ ಅಸಮರ್ಥತೆಯು ಸರ್ಕಾರವು ಮತ್ತಷ್ಟು ಬೆಂಬಲವನ್ನು ಕಳೆದುಕೊಳ್ಳಲು ಕಾರಣವಾಗುತ್ತಿದೆ. === ISIನ ಪಾತ್ರ === ಪಾಕಿಸ್ತಾನಿ ಗೂಢಚರ ಸಂಸ್ಥೆಯಾದ ಇಂಟರ್‌-ಸರ್ವೀಸಸ್‌ ಇಂಟೆಲಿಜೆನ್ಸ್‌ ಸಂಸ್ಥೆಯು ಬಂಡಾಯವನ್ನು ಬೆಂಬಲಿಸುತ್ತಾ ಬಂದಿದೆ ಹಾಗೂ ಸಹಾಯ ಹಸ್ತವನ್ನು ಕೂಡಾ ಚಾಚಿದೆ. ಕಾಶ್ಮೀರದಲ್ಲಿನ ಭಾರತದ ಆಳ್ವಿಕೆಯ ನ್ಯಾಯಸಮ್ಮತತೆಯ ಬಗ್ಗೆ ಅದು ತಕರಾರು ಹೊಂದಿರುವುದರಿಂದ ಭಾರತದ ಸೇನಾಪಡೆಗಳ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ಹಾಗೂ ಭಾರತದ ಮೇಲೆ ಅಂತರರಾಷ್ಟ್ರೀಯ ತಿರಸ್ಕಾರ ಉಂಟಾಗುವ ಹಾಗೆ ಮಾಡಲು ಸುಲಭವಾದ ದಾರಿ ಬಂಡಾಯವನ್ನು ಉಂಟು ಮಾಡುವುದೆಂದು ಕಂಡುಕೊಂಡಿರುವುದರಿಂದ ಆ ಸಂಸ್ಥೆಯು ಹಾಗೆ ಮಾಡುತ್ತದೆ. === ರಾಜಕೀಯ ಹಕ್ಕುಗಳು === ಕಾಶ್ಮೀರಿಗಳ ರಾಜಕೀಯ ಹಕ್ಕುಗಳ ಬಗ್ಗೆ ಭಾರತದ ಸರ್ಕಾರವು ದಿವ್ಯ ನಿರ್ಲಕ್ಷ್ಯವನ್ನು ತೋರಿಕೊಂಡು ಬರುತ್ತಿದೆ. ಇದರ ವಿರುದ್ಧವಾಗಿ ೧೯೮೭ರಲ್ಲಿನ ರಾಜ್ಯ ಚುನಾವಣೆಗಳಲ್ಲಿ ಬಲವಂತದ/ನಕಲಿ ಮತದಾನಗಳು ಔಪಚಾರಿಕವಾಗಷ್ಟೇ ಬಂಡಾಯದ ಕಿಡಿ ಹೊತ್ತಿಸಲು ಕಾರಣವಾಗಿದ್ದವು. ಇದು ಸರ್ಕಾರ ವಿರೋಧಿ ಮನೋಭಾವನೆ ಉಂಟಾಗಲು ತನ್ನ ಕೊಡುಗೆಯನ್ನಿತ್ತಂತಾಗಿದೆ. ಕಾಶ್ಮೀರದ ಸಂಪೂರ್ಣ ಪಂಚಾಯತ್‌ ರಾಜ್‌ ಸ್ಥಾನಗಳೆಲ್ಲವುಗಳ ಪೈಕಿ ಬಹುತೇಕ ಅರ್ಧದಷ್ಟು ಸ್ಥಾನಗಳು ಖಾಲಿಯಿದ್ದು ಹಾಗಿರುವುದಕ್ಕೆ ಕಾರಣ ಈ ಘರ್ಷಣೆಗಳು ಉಂಟುಮಾಡುವ ಅಸ್ಥಿರತೆಯಾಗಿದೆ ಎಂದು ಸರ್ಕಾರದ ವರದಿಯೊಂದು ಹೇಳಿದೆ. ಪಂಚಾಯತ್‌ ರಾಜ್‌ ವ್ಯವಸ್ಥೆಯು ಭಾರತದ ಸಂವಿಧಾನಕ್ಕೆ ೭೩ನೆಯ ತಿದ್ದುಪಡಿಯೊಂದನ್ನು ತರುವ ಮೂಲಕ ರೂಪಿಸಲಾದ ಗ್ರಾಮಗಳ ಮಟ್ಟದ ಚುನಾಯಿತ ಆಡಳಿತ ವ್ಯವಸ್ಥೆಯಾಗಿರುತ್ತದೆ. ಇದೇ ವರದಿಯು ಪರಿಣಾಮಕಾರಿಯಾಗಿ ಆಡಳಿತ ನಡೆಸುವ ಅವರ ಸಾಮರ್ಥ್ಯವನ್ನೇ ಇಲ್ಲಿ 'ಕುಂಠಿತಗೊಳಿಸಲಾಗಿದೆ' ಎಂದು ಪ್ರತಿಪಾದಿಸಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರವು ಕಾಶ್ಮೀರಿಗಳ ರಾಜಕೀಯ ದೃಷ್ಟಿಕೋನವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಲಾರಂಭಿಸಿದೆ, ಅದರಲ್ಲೂ ವಿಶೇಷವಾಗಿ ಚುನಾವಣೆಗಳ ಮೂಲಕ ವ್ಯಕ್ತಪಡಿಸಿದಂತಹ ದೃಷ್ಟಿಕೋನವನ್ನು ಪರಿಗಣಿಸಲಾರಂಭಿಸಿದೆ ಎಂಬುದರ ಬಗ್ಗೆ ಕೆಲವು ಸೂಚನೆಗಳು ಕಂಡುಬರುತ್ತಿವೆ. ೨೦೦೮ರ ಜಮ್ಮು ಮತ್ತು ಕಾಶ್ಮೀರಗಳ ರಾಜ್ಯ ಶಾಸನಸಭೆ ಚುನಾವಣೆಗಳ ಸಮಯದಲ್ಲಿ, ರಾಷ್ಟ್ರಮಟ್ಟದ ಆಡಳಿತಾರೂಢ ಪಕ್ಷವು ತಮ್ಮ ಹಿತಾಸಕ್ತಿಗಳಿಗೆ ನೇರ ವಿರುದ್ಧವಾಗಿದ್ದರೂ ಚುನಾವಣೆಯ "ಜನಾದೇಶವನ್ನು ಗೌರವಿಸುವ " ಉದ್ದೇಶದಿಂದ ಬಹುಮತ ಪಡೆದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಯಿತು. === ಮುಜಾಹಿದೀನ್‌ಗಳ ಪ್ರಭಾವ === ಸೋವಿಯೆತ್‌ ಒಕ್ಕೂಟವು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮುಜಾಹಿದೀನ್‌ ಹೋರಾಟಗಾರರು, ತೀವ್ರಗಾಮಿ ಮಹಮ್ಮದೀಯ ಸಿದ್ಧಾಂತವನ್ನು ಹರಡುವ ಉದ್ದೇಶದೊಂದಿಗೆ ಪಾಕಿಸ್ತಾನದ ಸಹಾಯಹಸ್ತದಿಂದ ಸಾವಕಾಶವಾಗಿ ಕಾಶ್ಮೀರದೊಳಕ್ಕೆ ರಹಸ್ಯವಾಗಿ ನುಸುಳಿದ್ದರು. === ಧಾರ್ಮಿಕತೆ === ಜಮ್ಮು ಮತ್ತು ಕಾಶ್ಮೀರ ರಾಜ್ಯವು ಹಿಂದೂ ಬಹು-ಸಂಖ್ಯಾತ ಭಾರತದಲ್ಲಿರುವ ಏಕೈಕ ಮುಸಲ್ಮಾನ ಬಹುಸಂಖ್ಯಾತ ರಾಜ್ಯವಾಗಿದೆ. ಭಾರತವು ತನ್ನ ಮಟ್ಟಿಗೆ ಜಾತ್ಯತೀತ ರಾಷ್ಟ್ರವಾದರೂ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ಇಡೀ ಭಾರತವನ್ನು ಪರಿಗಣಿಸಿದರೆ ಮುಸಲ್ಮಾನರು ಪ್ರಾಧಾನ್ಯರಹಿತರಾಗಿದ್ದಾರೆ. ಈ ಪರಿಸ್ಥಿತಿಯು ಮುಸಲ್ಮಾನರು ಭಾರತಕ್ಕೆ ಸೇರಿದವರಲ್ಲ ಎಂಬ ಭಾವನೆ ಮೂಡುವಂತೆ ಮಾಡಿದ್ದು ಕಾಶ್ಮೀರಿ ಜನರನ್ನು ವಿಮುಖರಾಗುವಂತೆ ಮಾಡಿದೆ. ಹಿಂದೂ ಸಂಘಟನೆಯೊಂದಕ್ಕೆ ೯೯ ಎಕರೆಗಳಷ್ಟು ಅರಣ್ಯಭೂಮಿಯನ್ನು ಹಸ್ತಾಂತರಿಸುವ ಸರ್ಕಾರದ ನಿರ್ಧಾರವು ಈ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಬೃಹತ್‌ ಪ್ರತಿಭಟನಾ ಮೆರವಣಿಗೆಗಳಲ್ಲಿ ಒಂದಕ್ಕೆ ಕಾರಣವಾಯಿತು. === ಇತರೆ ಕಾರಣಗಳು === ಭಾರತದ ರಾಷ್ಟ್ರೀಯ ಜನಗಣತಿಯು ಕಾಶ್ಮೀರವು ಬಹುತೇಕ ಸಾಮಾಜಿಕ ಅಭಿವೃದ್ಧಿ ಸೂಚಕಗಳಾದ ಸಾಕ್ಷರತೆಯ ಪ್ರಮಾಣಗಳಲ್ಲಿ ಇತರ ರಾಜ್ಯಗಳಿಗಿಂತ ಹಿಂದಿದ್ದು ನಿರುದ್ಯೋಗವು ಅಸಾಧಾರಣ ಮಟ್ಟವನ್ನು ಮುಟ್ಟಿದೆ. ಇದು ಮತ್ತಷ್ಟು ಸರ್ಕಾರ ವಿರೋಧಿ ಮನೋಭಾವನೆಯು ಉಂಟಾಗುವುದಕ್ಕೆ ಕಾರಣವಾಗಿದೆ. == ತಂತ್ರಗಳು == === ಭಾರತ === ಕಾಲ ಕಳೆಯುತ್ತಾ ಹೋದಂತೆ ಭಾರತದ ಸರ್ಕಾರವು ಕಾಶ್ಮೀರದಲ್ಲಿನ ತನ್ನ ಗುರಿಗಳನ್ನು ಸಾಧಿಸಲು ಸೇನಾ ಪಡೆಯ ಉಪಸ್ಥಿತಿ ಹಾಗೂ ನಾಗರಿಕ ಸ್ವಾತಂತ್ರ್ಯಗಳ ಮೊಟಕುಗೊಳಿಸುವಿಕೆಯನ್ನೇ ಹೆಚ್ಚು ಹೆಚ್ಚಾಗಿ ಅವಲಂಬಿಸುತ್ತಾ ಬಂದಿದೆ. ಸೇನಾಪಡೆಯು ಗಮನಾರ್ಹ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಾ ಬಂದಿದೆ. ಬಂಡಾಯದ ಇತಿಹಾಸದ ಬಹುಭಾಗದ ಅವಧಿಯಲ್ಲಿ ಸರ್ಕಾರವು ಕಾಶ್ಮೀರಿ ಜನಸಮೂಹದ ರಾಜಕೀಯ ದೃಷ್ಟಿಕೋನಗಳಿಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿರಲಿಲ್ಲ. ಕೇಂದ್ರ ಸರ್ಕಾರವು ಆಗ್ಗಾಗ್ಗೆ ಅಲ್ಲಿನ ಶಾಸನಸಭೆಗಳನ್ನು ವಿಸರ್ಜಿಸುವುದು, ಚುನಾಯಿತ ಪ್ರತಿನಿಧಿಗಳನ್ನು ದಸ್ತಗಿರಿ ಮಾಡುವುದು ಹಾಗೂ ರಾಷ್ಟ್ರಪತಿ ಆಡಳಿತವನ್ನು ಹೇರುವುದು ತರಹದ ನಡವಳಿಕೆಗಳನ್ನೇ ಮಾಡಿಕೊಂಡು ಬಂದಿತ್ತು. ಕೇಂದ್ರಸರ್ಕಾರವು ೧೯೮೭ರಲ್ಲಿ ಚುನಾವಣೆಗಳಲ್ಲಿಯೇ ಬಲವಂತದ/ನಕಲಿ ಮತದಾನಗಳನ್ನು ಕೂಡಾ ನಡೆಸಿತ್ತು. ಇತ್ತೀಚಿನ ದಿನಗಳಲ್ಲಿ ಕೇಂದ್ರಸರ್ಕಾರವು ಸ್ಥಳೀಯ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದರ ಬಗ್ಗೆ ಸೂಚನೆಗಳು ಕಂಡುಬರುತ್ತಿವೆ. ಕೇಂದ್ರ ಸರ್ಕಾರವು ಕಾಶ್ಮೀರಕ್ಕೆ ಅಭಿವೃದ್ಧಿಕಾರ್ಯಗಳಿಗೆ ಸಹಾಯಧನವನ್ನು ಕೂಡಾ ಹರಿಸುತ್ತಿದೆ. ಹಾಗಾಗಿ ಈ ಮೂಲಕ ಕಾಶ್ಮೀರವು ಪ್ರಸ್ತುತ ಒಕ್ಕೂಟದ ತಲಾ ವ್ಯಕ್ತಿಗೆ ಅತಿ ಹೆಚ್ಚಿನ ಮೊತ್ತದ ಸಹಾಯಧನವನ್ನು ಪಡೆಯುವ ರಾಜ್ಯವಾಗಿ ಮಾರ್ಪಟ್ಟಿದೆ. === ಪಾಕಿಸ್ತಾನ === ಪಾಕಿಸ್ತಾನದ ಸರ್ಕಾರವು ಮೂಲತಃ ಕಾಶ್ಮೀರದಲ್ಲಿ ಬಂಡಾಯವನ್ನು ಬೆಂಬಲಿಸಿ, ತರಬೇತಿ ಕೊಟ್ಟು ಹಾಗೂ ಶಸ್ತ್ರ ಸರಬರಾಜುಗಳನ್ನು ಮಾಡುತ್ತಾ ಬಂದಿತ್ತು, ಆದಾಗ್ಯೂ ಕಾಶ್ಮೀರಿ ಬಂಡಾಯಕ್ಕೆ ಸಂಬಂಧಿಸಿದ ಸಂಘಟನೆಗಳು ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ರನ್ನು ಹತ್ಯೆ ಮಾಡಲು ಎರಡು ಬಾರಿ ಪ್ರಯತ್ನಿಸಿದ ನಂತರ, ಮುಷರ್ರಫ್‌ರು ಅಂತಹ ಸಂಘಟನೆಗಳಿಗೆ ಬೆಂಬಲವನ್ನು ಮುಂದುವರೆಸದಿರಲು ನಿರ್ಧರಿಸಿದರು. ಅವರ ಉತ್ತರಾಧಿಕಾರಿಯಾದ ಆಸಿಫ್‌ ಅಲಿ ಜರ್ದಾರಿ ಬಂಡಾಯಗಾರರನ್ನು ಕಾಶ್ಮೀರದಲ್ಲಿನ “ಭಯೋತ್ಪಾದಕರು” ಎಂದು ಕರೆದು ಅದೇ ಕಾರ್ಯನೀತಿಯನ್ನು ಮುಂದುವರೆಸಿದರು. ಪಾಕಿಸ್ತಾನಿ ಗೂಢಚರ ಸಂಸ್ಥೆಯಾದ ಇಂಟರ್‌-ಸರ್ವೀಸಸ್‌ ಇಂಟೆಲಿಜೆನ್ಸ್‌ ಸಂಸ್ಥೆಯು ಪಾಕಿಸ್ಥಾನ ಸರ್ಕಾರವು ನೀಡಿದ ಸೂಚನೆಯನ್ನು ಅನುಸರಿಸಿ ಕಾಶ್ಮೀರದಲ್ಲಿನ ಬಂಡಾಯಗಾರ ಗುಂಪು/ತಂಡಗಳಿಗೆ ನೀಡುತ್ತಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲದೇ ಹೋದರೂ ಬಂಡಾಯಗಳಿಗೆ ಪಾಕಿಸ್ತಾನಿಯರ ಬೆಂಬಲವಂತೂ ಖಂಡಿತಾ ಕಡಿಮೆಯಾಗಿದೆ. === ಬಂಡಾಯಗಾರರು === ೨೦೦೦ರ ಸರಿಸುಮಾರು ವೇಳೆಯಿಂದ ‘ಬಂಡಾಯ’ವು ಸಾಕಷ್ಟು ಮಟ್ಟಿಗೆ ಕಡಿಮೆಯೆನಿಸುವಷ್ಟು ಹಿಂಸಾಚಾರವನ್ನು ಹೊಂದಿದ್ದು ತನ್ನ ಹಾದಿಯನ್ನು ಪ್ರತಿಭಟನೆಗಳು ಹಾಗೂ ಮೆರವಣಿಗೆಗಳ ಸ್ವರೂಪವನ್ನು ಪಡೆದುಕೊಂಡಿದೆ. ಕೆಲವು ನಿರ್ದಿಷ್ಟ ತಂಡ/ಗುಂಪುಗಳು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಹಾಗೂ ಬಿಕ್ಕಟ್ಟಿಗೆ ಶಾಂತಿಪೂರ್ವಕ ಪರಿಹಾರವನ್ನು ಕಂಡುಕೊಳ್ಳುವ ದಾರಿಯನ್ನು ಆಯ್ಕೆ ಮಾಡಿಕೊಂಡಿವೆ. === ಗುಂಪುಗಳು === ಬೇರೆ ಬೇರೆ ದಂಗೆಕೋರ ಗುಂಪುಗಳು ತಮ್ಮದೇ ಆದ ಬೇರೆ ಬೇರೆ ಗುರಿಗಳನ್ನು ಕಾಶ್ಮೀರದಲ್ಲಿ ಹೊಂದಿವೆ. ಕೆಲವು ಗುಂಪುಗಳು ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳಿಂದಲೂ ಸಂಪೂರ್ಣ ಸ್ವಾತಂತ್ರ್ಯವನ್ನು ಬಯಸಿದರೆ, ಕೆಲವು ಪಾಕಿಸ್ತಾನದೊಂದಿಗೆ ಏಕೀಕೃತಗೊಳ್ಳಲು ಬಯಸುತ್ತಿವೆ ಹಾಗೂ ಇನ್ನೂ ಕೆಲವು ಭಾರತದ ಸರ್ಕಾರದಿಂದ ಇನ್ನೂ ಹೆಚ್ಚಿನ ಮಟ್ಟದ ಸ್ವಾಯತ್ತತೆಯನ್ನಷ್ಟೇ ಕೇಳುತ್ತಿವೆ. ೨೦೧೦ರಲ್ಲಿ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿನ ೪೩% ಜನರು ಸ್ವಾತಂತ್ರ್ಯವನ್ನು ಬಯಸುತ್ತಾರೆ , ಪ್ರಾಂತ್ಯದಾದ್ಯಂತ ಹೀಗೆ ಸ್ವಾತಂತ್ರ್ಯ ಚಳುವಳಿಗೆ ಬೆಂಬಲವು ಅಸಮವಾಗಿ ಹಂಚಿಹೋಗಿದೆ. == ಗುರುತು == ಕಳೆದ ಎರಡು ವರ್ಷಗಳ ಅವಧಿಯಲ್ಲಿ, ಭಯೋತ್ಪಾದಕ ಸಂಘಟನೆಯಾದ ಲಷ್ಕರ್‌-ಎ-ತೊಯ್ಬಾವು ಎರಡು ಬಣಗಳಾಗಿ ವಿಭಜಿತಗೊಂಡಿದೆ: ಅವುಗಳೆಂದರೆ ಅಲ್‌ ಮನ್‌ಸೂರಿನ್‌ ಮತ್ತು ಅಲ್‌ ನಾಸಿರೀನ್‌. ಪ್ರವರ್ಧಮಾನಕ್ಕೆ ಬಂದಿದೆಯೆಂದು ವರದಿಯಾದ ಮತ್ತೊಂದು ನವೀನ ಸಂಘಟನೆಯೆಂದರೆ ಕಾಶ್ಮೀರ ಉಳಿಸಿ ಚಳುವಳಿಯಾಗಿದೆ. ಹರ್ಕತ್‌-ಉಲ್‌-ಮುಜಾಹಿದೀನ್‌ (ಈ ಹಿಂದೆ ಹರ್ಕತ್‌-ಉಲ್‌-ಅನ್ಸಾರ್‌ ಎಂದು ಕರೆಸಿಕೊಳ್ಳುತ್ತಿತ್ತು) ಹಾಗೂ ಲಷ್ಕರ್‌-ಎ-ತೊಯ್ಬಾ ಸಂಘಟನೆಗಳು ಅನುಕ್ರಮವಾಗಿ ಪಾಕಿಸ್ತಾನದ ಮುಝಫರಾಬಾದ್‌, ಆಜಾದ್‌ ಕಾಶ್ಮೀರ ಮತ್ತು ಮುರಿಡ್ಕೆಗಳಿಂದ ಕಾರ್ಯಾಚರಿಸುತ್ತಿವೆ ಎಂದು ಭಾವಿಸಲಾಗಿದೆ. ಇತರೆ ಹೆಚ್ಚೇನೂ ಪ್ರಸಿದ್ಧವಾಗಿಲ್ಲದ ಸಂಘಟನೆಗಳೆಂದರೆ ಫ್ರೀಡಮ್‌ ಫೋರ್ಸ್‌ (ಸ್ವಾತಂತ್ರ್ಯ ದಳ) ಮತ್ತು ಫರ್ಜಂದಾನ್‌-ಎ-ಮಿಲ್ಲತ್‌ ಗಳಾಗಿವೆ. ಅಲ್‌-ಬದರ್ಎಂ ಬ ಸಣ್ಣ ಗುಂಪೊಂದು ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಚಟುವಟಿಕೆಯಲ್ಲಿದೆ ಹಾಗೂ ಈಗಲೂ ಕಾರ್ಯನಿರ್ವಹಿಸುತ್ತಿದೆಯೆಂದು ಭಾವಿಸಲಾಗಿದೆ. ಸರ್ವ ಪಕ್ಷಗಳ ಹುರಿಯತ್‌ ಒಕ್ಕೂಟವು , ಕಾಶ್ಮೀರಿಗಳ ಹಕ್ಕುಗಳ ಬಗ್ಗೆ ಒತ್ತಾಯವನ್ನು ಹೇರುತ್ತಿರುವ ಸೌಮ್ಯವಾದಿ ಸಂಘಟನೆಯಾಗಿದ್ದು, ಇದು ನವ ದೆಹಲಿ ಹಾಗೂ ದಂಗೆಕೋರ ಗುಂಪುಗಳ ನಡುವೆ ಮಧ್ಯಸ್ಥಿಕೆಯ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ. === ಅಲ್-ಖೈದಾ === ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್‌ ಖೈದಾ ಅಸ್ತಿತ್ವದಲ್ಲಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಡೊನಾಲ್ಡ್‌ ರಮ್ಸ್‌ಫೆಲ್ಡ್‌ರು ಅವರು ಸಕ್ರಿಯರಾಗಿದ್ದಾರೆ ಎಂದು ಸೂಚಿಸಿದ್ದರು ಆದ್ದರಿಂದ ೨೦೦೨ರಲ್ಲಿ ಸಂಸ್ಥೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಒಸಾಮಾ ಬಿನ್‌ ಲಾಡೆನ್‌ಗಾಗಿ ಹುಡುಕಾಟ ನಡೆಸಿತು. ಅಲ್‌ ಖೈದಾ ತಾನು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ತನ್ನದೊಂದು ನೆಲೆಯನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. ಆದಾಗ್ಯೂ ಅಂತಹ ಹೇಳಿಕೆಗೆ ಯಾವುದೇ ರೀತಿಯ ಸಾಕ್ಷ್ಯಾಧಾರವು ದೊರಕಿಲ್ಲ. ಭಾರತೀಯ ಸೇನಾ ಪಡೆಯೂ ಕೂಡಾ ಜಮ್ಮು ಮತ್ತು ಕಾಶ್ಮೀರಗಳಲ್ಲಿ ಅಲ್‌ ಖೈದಾವು ಅಸ್ತಿತ್ವದಲ್ಲಿದೆ ಎಎಂಬುದರ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದೇ ಪ್ರತಿಪಾದಿಸುತ್ತದೆ. ಪಾಕಿಸ್ತಾನಿ ಆಕ್ರಮಿತ ಕಾಶ್ಮೀರ ಹಾಗೂ ಇನ್ನೂ ಕೆಲವು ಪ್ರದೇಶಗಳಲ್ಲಿ ಅಲ್ ಖೈದಾ ತನ್ನ ನೆಲೆಗಳನ್ನು ಸ್ಥಾಪಿಸಿಕೊಂಡಿದ್ದು ರಾಬರ್ಟ್‌ ಗೇಟ್ಸ್‌ ಸೇರಿದಂತೆ ಹಲವರು ಹೇಳುವ ಪ್ರಕಾರ ಅವರು ಭಾರತದ ಮೇಲೆ ದಾಳಿಗಳನ್ನು ಯೋಜಿಸಿ ನಡೆಸುವುದಕ್ಕೆ ಸಹಾಯವನ್ನು ಮಾಡಿದ್ದಾರೆ. == ಇವನ್ನೂ ಗಮನಿಸಿ == ಭಾರತದ ವಿಭಜನೆ ಕಾಶ್ಮೀರ ಘರ್ಷಣೆಗಳ ಕಾಲಾನುಕ್ರಮಿತ ಘಟನಾವಳಿ ಜಮ್ಮು ಮತ್ತು ಕಾಶ್ಮೀರದ ಇತಿಹಾಸ ಕಾಶ್ಮೀರ ಘರ್ಷಣೆಗಳು ಜಮ್ಮು ಮತ್ತು ಕಾಶ್ಮೀರ ಕಾಶ್ಮೀರ ಭಾರತ-ಪಾಕಿಸ್ತಾನ ಯುದ್ಧಗಳು ಹಾಗೂ ಘರ್ಷಣೆಗಳು === ಬಿಕ್ಕಟ್ಟಿನ ವಿವರ === ಕಾಶ್ಮೀರ ಕಣಿವೆ- ೨೪-೨-೨೦೧೯ ಪ್ರಜಾವಾಣಿ ಕಾಶ್ಮೀರ: ಉಗ್ರರ ಕಣಿವೆ; ಜುಲ್ಫಿಕರ ಮಸೀದ್; ೨೪-೨-೨೦೧೯ ಹಾವನ್ನು ಬಿಟ್ಟು ಹುತ್ತವ ಬಡಿದಂತೆ- ಡಿ ಉಮಾಪತಿ;೨೪-೨-೨೦೧೯ == ಉಲ್ಲೇಖಗಳು‌ ==